ನವ೦ಬರ್ 23ಕ್ಕೆ ವೈಶಿಷ್ಟ್ಯಪೂರ್ಣ ಯಕ್ಷಗಾನ ಪ್ರಸಂಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 9 , 2013
|
ನವ೦ಬರ್ 9 , 2013
|
ನವ೦ಬರ್ 23ಕ್ಕೆ ವೈಶಿಷ್ಟ್ಯಪೂರ್ಣ ಯಕ್ಷಗಾನ ಪ್ರಸಂಗ
ಕುಮಟಾ :
ಕಲಾವಿದರನ್ನು ಗೌರವಿಸುತ್ತ ಬಂದಿರುವ ಇಲ್ಲಿನ ಕಲಾಗಂಗೋತ್ರಿ ಬಳಗವು ನವೆಂಬರ್ 23ರಂದು ಮಣಕಿ-ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹೊಸ ಪರಿಕಲ್ಪನೆಯಲ್ಲಿ ಸಮುದ್ರ ಮಥನ, ಚಕ್ರವೂಹ್ಯ ಹಾಗೂ ವಾಲಿಮೋಕ್ಷ ಯಕ್ಷಗಾನ ಪ್ರಸಂಗ ವೈಶಿಷ್ಟ್ಯಪೂರ್ಣವಾಗಿ ಪ್ರದರ್ಶಿಸಲ್ಪಡಲಿದೆ ಎಂದು ಕಲಾಗಂಗೋತ್ರಿ ಬಳಗದವರು ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಈ ಹಿಂದೆ ಕೀಚಕ-ಕೀಚಕ-ಕೀಚಕ ಎಂಬ ಸ್ಪರ್ಧಾತ್ಮಕ ಯಕ್ಷಗಾನವನ್ನು ಆಯೋಜಿಸಿ, ಯಕ್ಷರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ಹಾಗೂ ಅಟ್ಟಣಿಗೆ ಯಕ್ಷಗಾನ ಏರ್ಪಡಿಸಿ ಯಕ್ಷಗಾನ ಕಲೆಗೆ ಮೆರಗು ಹಾಗೂ ಕಲಾಭಿಮಾನಿಗಳಿಗೆ ಬೆರಗು ಮುಟ್ಟಿಸಿದ ಕಲಾಗಂಗೋತ್ರಿಯಿಂದ ಈ ಬಾರಿ ಬೃಹತ್ ವೇದಿಕೆಯಲ್ಲಿ ಒಂದು ನೂರು ಕಲಾವಿದರು ಏಕಕಾಲದಲ್ಲಿ ಮಂದರಗಿರಿಗೆ 300 ಅಡಿ ಉದ್ದದ ಶೇಷ ವಾಸುಕಿಯನ್ನು ಸುತ್ತಿ ಸಮುದ್ರ ಮಥನ ಮಾಡುವ ದೃಶ್ಯ ವೈಭವವನ್ನು, 50 ಕಲಾವಿದರು ದೀವಟಿಗೆ ಹಿಡಿದು ನಿರ್ಮಿಸಿದ ಚಕ್ರವೂಹ್ಯವನ್ನು ಭೇದಿಸಿ ವೀರ ಅಭಿಮನ್ಯು (ಗೋಪಾಲಾಚಾರ್ಯ ತೀರ್ಥಳ್ಳಿ) ಸೆಣಸುವ ರೋಮಾಂಚನಕಾರಿ ದೃಶ್ಯವನ್ನು ಹಾಗೂ ಕಿಷ್ಕಿಂದಾ ದ್ವಾರದಿಂದ ವಾಲಿಯು ಆಗಮಿಸುವ ವಿಶೇಷ ದೃಶ್ಯಾವಳಿ ಆಯೋಜಿಸಲಾಗುತ್ತಿದೆ.
ಕಾರ್ಯೋನ್ಮುಖ: ಹೊಸ ಪೀಳಿಗೆಯನ್ನು ಯಕ್ಷಗಾನ ಕಲೆಯತ್ತ ಸೆಳೆಯುವ ಉದ್ದೇಶದೊಂದಿಗೆ ರಂಗಭೂಮಿ ಖ್ಯಾತ ಕಲಾವಿದ ಜಿ.ಡಿ. ಭಟ್ಟ ಕೆಕ್ಕಾರ ಇವರ ಪರಿಕಲ್ಪನೆಯಲ್ಲಿ ಮೂಡಿ ಬರಲಿರುವ ದೃಶ್ಯವೈಭವಗಳು, ನಿನಾದ- ಕುಮಟಾ ಇವರ ಧ್ವನಿ-ಬೆಳಕು, ರಾಮ ಹೆಗಡೆ ಮೂರೂರು, ಲಕ್ಷಣ ನಾಯ್ಕ ಚಿತ್ತಾರ ಹಾಗೂ ಜಿ.ಕೆ. ನಾಯ್ಕ ಬರ್ಗಿ ಇವರ ವೇಷಭೂಷಣ ರಂಗವೈಭವವನ್ನು ಇಮ್ಮಡಿಗೊಳಿಸಲಿದೆ. 5000ಕ್ಕೂ ಅಧಿಕ ಪ್ರೇಕ್ಷಕರಿಗೆ ಆಸನ ವ್ಯವಸ್ಥೆಗೊಳಿಸಲಿದ್ದು, ಕಾರ್ಯಕ್ರಮಕ್ಕೆ ಅಂದಾಜು ರು. 5 ಲಕ್ಷ ವೆಚ್ಚ ತಗುಲಲಿದೆ. ಈ ಯಕ್ಷಗಾನ ಪ್ರಯೋಗಕ್ಕೆ ಕಲಾಭಿಮಾನಿಗಳಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಲಾಗಂಗೋತ್ರಿ ಬಳಗವು ಹೆಚ್ಚಿನ ಆತ್ಮವಿಶ್ವಾಸದಿಂದ ಕಾರ್ಯೋನ್ಮುಖವಾಗಲು ಕಾರಣವಾಗಿದೆ.
ಪೆರ್ಡೂರು ಮೇಳದ ಕಲಾವಿದರೊಂದಿಗೆ ಅತಿಥಿ ಕಲಾವಿದರಾಗಿ ಎಂ.ಎಲ್. ಸಾಮಗ, ತೋಟಿ, ವಿದ್ಯಾಧರ, ಕೆಪ್ಪೆಕೆರೆ, ಭಾಗವತರಾಗಿ ಉಮೇಶ ಭಟ್ಟ ಬಾಡ, ಸುರೇಶ ಶೆಟ್ಟಿ, 7 ಚಂಡೆವಾದಕರಾಗಿ ಶಾಂತರಾಮ ಭಂಡಾರಿ, ರಾಮನ್ ಹೆಗಡೆ ಹಾಗೂ 100ಕ್ಕೂ ಹೆಚ್ಚು ಅತಿಥಿ ಕಲಾವಿದರು ಭಾಗವಹಿಸಲಿದ್ದಾರೆ. ಕಲಾಗಂಗೋತ್ರಿ ಕಾರ್ಯಕ್ರಮಗಳ ಸಹಾಯಾರ್ಥ ಏರ್ಪಡಿಸಿರುವ ಈ ವೈಶಿಷ್ಟ್ಯಪೂರ್ಣ ಯಕ್ಷಗಾನ ಪ್ರಯೋಗಕ್ಕೆ ಈ ಹಿಂದಿನಂತೆ ಕಲಾಭಿಮಾನಿಗಳು ಸಹಕರಿಸಬೇಕು ಎಂದರು. ಕಲಾಗಂಗೋತ್ರಿ ಅಧ್ಯಕ್ಷ ಶ್ರೀಧರ ನಾಯ್ಕ ವಕ್ಕನಳ್ಳಿ, ಉಪಾಧ್ಯಕ್ಷ ಗಣೇಶ ಭಟ್ಟ ಬಗ್ಗೋಣ, ಖಜಾಂಚಿ ಆರ್.ಡಿ. ಪೈ ಹಾಗೂ ಕಲಾಗಂಗೋತ್ರಿ ಬಳಗವು ವಿನಂತಿಸಿಕೊಂಡಿದೆ. ಎನ್.ಪಿ. ನಾಗೇಕರ್, ಪ್ರೊ. ಎಂ.ಆರ್. ನಾಯಕ, ಪ್ರೊ. ಜಿ.ಎಸ್. ಭಟ್ಟ, ಶ್ರೀಪತಿ ನಾವುಡ, ಶ್ರೀಧರ ಶಾಸ್ತ್ರಿ, ಅಶೋಕ ಭಟ್ಟ, ರವಿ ನಾಯ್ಕ, ಪ್ರಕಾಶ ನಾಯ್ಕ, ಗಜು ಕಡೆಕೋಡಿ, ಕೆ.ಎನ್. ಹೆಗಡೆ, ವೆಂಕಟೇಶ ಹೆಗಡೆ, ನಾಗರಾಜ ಆಚಾರಿ, ಜಿ.ಎನ್. ಹೆಗಡೆ, ಎಂ.ಟಿ. ನಾಯ್ಕ, ಗಣಪತಿ ಹೆಗಡೆ, ಅಶೋಕ ಗೌಡ, ಎಸ್.ಟಿ. ಭಟ್ಟ, ಅನಂತ ಅಡಿ, ಅಶೋಕ ಕಾಮತ, ಸಲಹೆಗಾರರಾದ ಆರ್.ಜಿ. ಭಟ್ಟ ಹಾಗೂ ಕಲಾಗಂಗೋತ್ರಿ ಬಳಗದ ಸದಸ್ಯರು ಇದ್ದರು.
ಕೃಪೆ : http://www.http://kannadaprabha.com/
|
|
|